ಈ ಹಿಂದೆ ಸಾಧುಕೋಕಿಲ ಅಭಿನಯದ ‘ನವರಂಗಿ’ ಎಂಬ ಕಾಮಿಡಿ ಚಿತ್ರವನ್ನು ನಿರ್ದೇಶಿಸಿದ್ದ ಜಿ.ಉಮೇಶ ಇದೀಗ ಮತ್ತೊಂದು ಚಿತ್ರವನ್ನು ನಿರ್ದೇಶನ ಮಾಡಲು ಹೊರಟಿದ್ದಾರೆ. ಎಲ್ಲರ ಹಾಗೆ ಅವರು ಕೂಡ ಈ ಭಾರಿ ದೆವ್ವದ ಬೆನ್ನು ಹತ್ತಿದ್ದಾರೆ, ಗಣೇಶ ಹಬ್ಬದಂದು ವಿನಾಶಿನಿ ಎಂಬ ಚಿತ್ರಕ್ಕೆ ಮಾಗಡಿ ರಸ್ತೆಯ ಭಾರತ ನಗರದ ಶ್ರೀ ಗಣೇಶ ದೇವಸ್ಥಾನದಲ್ಲಿ ಚಿತ್ರಕ್ಕೆ ಮಹೂರ್ತ ನೇರವೇರಿತು. ನಟ ಆರ್ಯನ್ ಹಾಗೂ ನಟಿ ಸುಮಲತ ಅಭಿನಯದ ಮೊದಲ ದೃಶ್ಯಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಕ್ಲಾಪ್ ಮಾಡಿದರೆ, ಚಲನಚಿತ್ರ ನಿರ್ಮಾಪಕ ನಾಗೇಶ್ ಕ್ಯಾಮರಾ ಚಾಲನೆ ಮಾಡಿದರು.
ಶ್ರೀಮಂತ ಹುಡುಗನೊಬ್ಬ ಬಡ ಹುಡುಗಿಯನ್ನು ಪ್ರೀತಿಸಿ ಮೋಸ ಮಾಡುತ್ತಾನೆ, ಮಾರ್ಯಾದೆಗೆ ಅಂಜಿದ ಆ ಹುಡುಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಆ ಪ್ರೇಯಸಿಯೇ ದೆವ್ವವಾಗಿ ತನಗೆ ಮೋಸಮಾಡಿದವನ ಮೇಲೆ ಸೇಡು ತೀರಿಸಿಕೊಳ್ಳವಂತಹ ಕಥಾಹಂದರ ಹೊಂದಿರುವ ಈ ಚಿತ್ರವು ಬೆಂಗಳೂರಿನಲ್ಲಿ ಮಹೂರ್ತವನ್ನು ಆಚರಿಸಿಕೊಂಡು, ಮಂಗಳೂರು, ಮಡಿಕೇರಿ, ಕೊಡಗು ಸುತ್ತಮುತ್ತ ಚಿತ್ರೀಕರಣ ನಡೆಸಲಿದೆ.
ಸೃಷ್ಠಿ ಮೂವಿ ಮೇಕರ್ಸ್ ಲಾಂಛನದಲ್ಲಿ ಧನಂಜಯ, ನಾಗೇಶ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಎ.ಸಿ. ಮಹೇಂದರ್ ಛಾಯಾಗ್ರಹಣ, ಹರಿಕಾವ್ಯ ಸಂಗೀತ, ನಾಗೇಶ್ ಕಥೆ, ಎ.ಮೋಹನ್ ಸಂಕಲನ, ಸೂರಿ ನೃತ್ಯ ನಿರ್ದೇಶನ, ಹರೀಶ್, ಕೃಷ್ಣ ಸಹನಿರ್ಮಾಪಕರಾಗಿದ್ದು, ಆರ್ಯನ್, ಸುಮಲತ, ಕಿಲ್ಲರ್ ವೆಂಕಟೇಶ್, ಬೌಬೌ ಜಯರಾಂ, ಕಾವ್ಯ, ರಮೇಶ್ಭಟ್, ಚೈತ್ರ, ಪೂಜಾ ಇನ್ನು ಮೊದಲಾದವರ ತಾರಾಬಳಗವಿದೆ.